Tuesday, August 23, 2022

ವಡಗೇರಾ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ



ವಡಗೇರಾ: ಹಿರಿಯ ನಾಗರಿಕರು ಮತ್ತು ಇನ್ನಿತರ ಫಲಾನುಭವಿಗಳು ಪಿಂಚಣಿ ನಿಂತಿರುವ ಮತ್ತು ಪಿಂಚಣಿಗಾಗಿ ಹೊಸ ಅರ್ಜಿ ಸಲ್ಲಿಸಲು ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಅವರ ಮನೆ ಬಾಗಿಲಿಗೆ ಗ್ರಾಮ ಲೆಕ್ಕಿಗರು ಖುದ್ದು ಭೇಟಿ ನೀಡಿ, ಅರ್ಜಿ ಸ್ವೀಕರಿಸಿ ಪಿಂಚಣಿ ಮಂಜೂರು ಮಾಡುವಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಡಿಗೇರಾ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ ಭಾಗವಾಗಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಅಧಿಕಾರಿಗಳ ಸಭೆ ನಡೆಸಿ ಸಲ್ಲಿಕೆಯಾದ ಅರ್ಜಿಗಳನ್ನು ಖುದ್ದು ಪರಿಶೀಲಿಸಿ ಅವರು ಮಾತನಾಡಿದರು.

ಸಾಮಾಜಿಕ ಯೋಜನೆಗಳಾದ ವಯಸ್ಸಾದ ಪಿಂಚಣಿ, ವಿಧವೆ ಪಿಂಚಣಿ, ದೈಹಿಕವಾಗಿ ಅಂಗವಿಕಲರ ಪಿಂಚಣಿ, ಸಂಧ್ಯಾ ಸುರಕ್ಷತೆ ವಿವಿಧ ಯೋಜನೆಗಳ ಪಿಂಚಣಿಯನ್ನೇ ಅವಲಂಬಿಸಿರುವ ಇಂತಹ ಫಲಾನುಭವಿಗಳಿಗೆ ಆದಷ್ಟು ಬೇಗನೆ ಸೌಲಭ್ಯ ಒದಗಿಸಲು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ಬ್ಯಾಂಕ್ ಗಳ ಕಡೆಯಿಂದ ಸಮಸ್ಯೆಯಿದ್ದರೆ ಪರಿಶೀಲಿಸಿ ಫಲಾನುಭವಿಗಳ ಖಾತೆಗೆ ಪಿಂಚಣಿ ಹಣ ನೇರವಾಗಿ ಜಮಾ ಆಗುವಂತೆ ಕ್ರಮವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಪ್ರತಿ ಗ್ರಾಮಕ್ಕೆ ಸ್ಮಶಾನಕ್ಕೆ ಜಾಗ ಇರುವಂತೆ ಕ್ರಮ ಸಹ ಕೈಗೊಳ್ಳಲಾಗುತ್ತಿದ್ದು, ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ತಕ್ಷಣ ಸರ್ಕಾರಿ ಜಮೀನು ಅಥವಾ ಖರೀದಿಸಿದ ಖಾಸಗಿ ಜಮೀನು ಮಂಜೂರು ಮಾಡಬೇಕು. ಸರ್ಕಾರದ ಆಸ್ತಿಯನ್ನು ಉಳಿಸೋದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹೀಗಾಗಿ ಒತ್ತುವರಿ ಜಮೀನನ್ನು ಗುರುತಿಸಿ ತಕ್ಷಣ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಸೂಚಿಸಿದರು..

ಈ ಸಂದರ್ಭದಲ್ಲಿ ವಡಗೇರಾ ತಹಶೀಲ್ದಾರ ಸುರೇಶ ಅಂಕಲಗಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಣಾ ಅಧಿಕಾರಿ ಬಸವರಾಜ ಎಮ್ ಸಜ್ಜನ್, ಶಹಾಪುರ ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ, ಉಪ ತಹಶೀಲ್ದಾರ ಸಿದ್ದಯ್ಯಸ್ವಾಮಿ ಹಾಗೂ ಇನ್ನಿತರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಆಧಾರ್ ಲಿಂಕ್ ಮಾಡಬೇಕು ಸ್ನೇಹಲ್ ಆರ್

 



ವಡಗೇರಾ: ಬೂತ್ ಮಟ್ಟದ ಅಧಿಕಾರಿಯು ಎಲ್ಲಾ ವಿವರಗಳನ್ನು ಪರಿಶೀಲಿಸಿ ವೋಟರ್ ಐಡಿಗೆ ಆಧಾರ ಲಿಂಕ್ ಮಾಡಲು ಮನೆ-ಮನೆಗಳಿಗೆ ಭೇಟಿ ನೀಡಬೇಕು. ನಂತರ ಅದು ದಾಖಲೆಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಪಟ್ಟಣದ ಪ್ರೌಢಶಾಲೆಯಲ್ಲಿ ನಡೆದ ಬಿಎಲ್ಓ ದವರಿಗೆ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಕುರಿತ ತರಬೇತಿಗೆ ಜಿಲ್ಲಾಧಿಕಾರಿ  ಸ್ನೇಹಲ್ ಆರ್. ಅವರು 
ಭೇಟಿ ನೀಡಿ ನಿರ್ದೇಶಿಸಿದರು.

ಪಟ್ಟಣದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಮಕ್ಕಳಿಗೆ ಅಡುಗೆ ತಯಾರಿಸಿ ಕೊಡುವ ಕೋಣೆಗಳಿಗೆ ಮತ್ತು ದಾಸ್ತಾನು ಕೊಠಡಿಗಳಿಗೆ ಭೇಟಿ ನೀಡಿ ವೀಕ್ಷಿಸಿದರು, ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಕೂಡ ಪರಿಶೀಲಿಸಿದರು.

ಆಧಾರ್‌ ಕಾರ್ಡ್ ಇಲ್ಲದಿದ್ದರೆ ಪರ್ಯಾಯ ದಾಖಲಾತಿಯೂ ನೀಡಬಹುದಾಗಿದೆ. ಆಧಾರ್ ಸಂಖ್ಯೆ ಒದಗಿಸುವುದು ಸಂಪೂರ್ಣವಾಗಿ ಸ್ವಯಂ ಪ್ರೇರಿತವಾಗಿದೆ. ಆಧಾರ್ ಜೋಡಣೆ ಕಡ್ಡಾಯವಲ್ಲ ಬದಲಾಗಿ ಮತದಾರರ ಆಧಾರ್‌ ಮತ್ತು ಮತದಾರರ ಚೀಟಿ ಜೋಡಣೆಯಾದರೆ ಹಲವು ಪ್ರಯೋಜನಗಳಿದ್ದು, ಪಾರದರ್ಶಕ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ಜನರಿಗೆ ಮನವರಿಕೆ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.


ಆನ್ಲೈನ್ ಮತ್ತು ಆಫ್ಲೈನಲ್ಲಿಯೂ ಅರ್ಜಿ ಸಲ್ಲಿಸಬಹುದು

NVSP, (ಎನ್ ವಿ ಎಸ್ ಎಸ್ ಪಿ ) VHA (ವಿ ಎಚ್ ಎ )

ERONET (ಈ ಆರ್ ಜಿ ಎನ್ ಈ ಟಿ ಮತ್ತು GARUDA (ಗರುಡ) ಅಪ್ಲಿಕೇಶನಗಳಲ್ಲಿ ಫಾರ್ಮ್ 6Bಯನ್ನು ಪಡೆದು ಆಧಾರ ಸಂಖ್ಯೆಯನ್ನು ಜನರಿಗೆ ಸ್ವಯಂ ನೋಂದಾಯಿಸಲು ಅಧಿಕಾರಿಗಳು ತಿಳಿಸಬೇಕು ಎಂದರು. ಈ ಸಂದರ್ಭದಲ್ಲಿ ವಡಿಗೇರಾ ತಹಶೀಲ್ದಾರ ಸುರೇಶ ಅಂಕಲಗಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಣಾ ಅಧಿಕಾರಿ ಬಸವರಾಜ ಎಮ್ ಸಜ್ಜನ್, ಶಹಾಪುರ ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ, ಉಪ ತಹಶೀಲ್ದಾರ ಸಿದ್ದಯ್ಯಸ್ವಾಮಿ ಹಾಗೂ ಇನ್ನಿತರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Monday, August 22, 2022

ವಿದ್ಯುತ್ ಚಾಲಿತ ವಾಹನ ಬಳಕೆಯಿಂದ ಬಹುವಿಧ ಅನುಕೂಲ: ಎಸ್.ಪಿ. ಡಾ. ವೇದಮೂರ್ತಿ


ಯಾದಗಿರಿ: ವಿದ್ಯುತ್ ಚಾಲಿತ ವಾಹನಗಳು ಬಳಸುವುದರಿಂದ ಬಹುರೀತಿಯ ಅನುಕೂಲಗಳು ಇವೆ  ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಅಭಿಪ್ರಾಯಪಟ್ಟರು. ನಗರದ ಶ್ರೀ ಬಾಲಾಜಿ ದೇವಸ್ಥಾನದ ಸಮೀಪ ಗ್ರಾಮೀಣ ಠಾಣೆ ಬಳಿ ಇರುವ ಓಕಿನೋವಾ ಇವಿ ಬೈಕ್ ಶೋರೂಂ ಶ್ರೀ ಬಸವ ಎಲೆಕ್ಟೀಕ್ ಮೋಟಾರ್ಸ್ ವತಿಯಿಂದ ಸ್ವಾತಂತ್ರ್ಯ  ಅಮೃತ ಮಹೋತ್ಸವ ಹಾಗೂ ಜನರಿಗೆ ಇವಿ (ವಿದ್ಯುತ್ ಚಾಲಿತ) ದ್ವಿಚಕ್ರ ವಾಹನಗಳ ಬಗ್ಗೆ ಜಾಗೃತಿ ಮೂಡಿಸುವ ಬೈಕ್ ರ‍್ಯಾಲಿ ಉದ್ಘಾಟಕರಾಗಿ ಪಾಲ್ಗೊಂಡು ಮಾತನಾಡಿದರು. ಇವಿ ವಾಹನಗಳು ಬಳಸುವುದರಿಂದ ಪರಿಸರ ಮಾಲಿನ್ಯ ತಡೆಯಲು ಸಾದ್ಯ ಇದರಿಂದ ಜಾಗತಿಯ ಬಿಸಿ ಹೆಚ್ಚಳಕ್ಕೆ ನಮ್ಮದೇ ಆದ ಕೊಡುಗೆ ನೀಡಿದಂತಾಗುತ್ತದೆ. ಆರ್ಥಿಕವಾಗಿ ಇಂದಿನ ದಿನಮಾನಗಳ ದುಬಾರಿ ಬದುಕಿನಲ್ಲಿ ತೀರ ಮಿತವ್ಯಯಕಾರಿಯಾಗಿರುವ ಈ ವಾಹನಗಳು ಬಳಕೆ ಸೂಕ್ತ ಮತ್ತು ವಾಹನಗಳಿಗೆ ಸರ್ಕಾರದ ಬೆಂಬಲವೂ ಇರುತ್ತದೆ ಎಂದು ವಿವರಿಸಿ ಪ್ರೋತ್ಸಾಹಿಸಿದರು.

ವೀರಭಾರತಿ ಪ್ರತಿಷ್ಠಾನ ಅದ್ಯಕ್ಷ, ಯಾದಗಿರಿ ಟೈಮ್ಸ್ ಪತ್ರಿಕೆ ಸಂಪಾದಕ ವೈಜನಾಥ ಹಿರೇಮಠ ಮಾತನಾಡಿ ಸರ್ಕಾರ ಮತ್ತು ಪ್ರಧಾನ ಮಂತ್ರಿಗಳು ಡೀಸೆಲ್ ಪೆಟ್ರೊಲ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದಲೇ ಇವಿಗಳಿಗೆ ಸಬ್ಸಿಡಿ ನೀಡುತ್ತಿದ್ದಾರೆ. ಇದಲ್ಲದೇ ಭವಿಷ್ಯದಲ್ಲಿ ವಿದ್ಯುತ್ ವಾಹನಗಳೇ ದೇಶದಲ್ಲಿ ಕಂಡುಬರಲಿವೆ ಎಂದು ಹೇಳಿದರು.

ಬಸವ ಮೋಟರ್ಸ್ನ ಮುಖ್ಯ ಪ್ರವರ್ತಕರಾದ ಅರುಣಕುಮಾರ ಹಿರೇಮಠ ಮಾತನಾಡಿ ಜನರಲ್ಲಿ ಈ ವಾಹನಗಳ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜಪಾನ್ ಮೂಲದ  ತಾಂತ್ರಿಕತೆ ಹಾಗೂ ದೇಶಿಯವಾಗಿ ತಯಾರಾದ ಬಿಡಿಭಾಗಗಳಿಂದ ಸಿದ್ದಗೊಂಡಿರುವ ಓಕಿನೋವಾ ವಾಹನ ಅತ್ಯಂತ ಹಿತಕಾರಿ, ಮಿತವ್ಯಯಕಾರಿಯಾಗಿದೆ ಎಂದು ವಿವರಿಸಿದರು. ಇದಲ್ಲದೇ ಸ್ವಾತಂತ್ರ್ಯದ  ಅಮೃತ ವರ್ಷದಲ್ಲಿ ವಾಹನಗಳು ದೇಶಾದ್ಯಂತ ರಸ್ತೆಗಿಳಿದಿರುವುದರಿಂದ ಜಿಲ್ಲೆಯಲ್ಲಿಯೂ ಈ ವಾಹನಗಳ ಬಗ್ಗೆ ಪ್ರಚಾರ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಂಪನಿಯ ಕರ್ನಾಟಕ ಮಾರುಕಟ್ಟೆ ವ್ಯವಸ್ಥಾಪಕ ವಿಜಯಕುಮಾರ ಹಿರೇಮಠ, ಬೀರಲಿಂಗ ದುಪ್ಪಲ್ಲಿ ಪೊಲೀಸ್, ಹಾಜಿ, ಶೋರೂಮ್ ಸಿಬ್ಬಂದಿ ಪ್ರಶಾಂತ, ಸಂಪತ್, ಅಜಯ್, ವಸಿಮ್, ಜಲಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


Sunday, August 7, 2022

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹುಟ್ಟುಹಬ್ಬ ಆಚರಣೆ


 


ಶಹಾಪುರ: ಡಾ.ಜಿ ಪರಮೇಶ್ವರ ಯುವ ಸೈನ್ಯ ಮತ್ತು ಸುಮಿತ್ ಸಾಮಾಜಿಕ ಸಾಂಸ್ಕ್ರುತಿಕ  ಶಿಕ್ಷಣ  ಸಂಸ್ಥೆ  ವತಿಯಿಂದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ 71ನೇ ಹುಟ್ಟು ಹಬ್ಬವನ್ನು 

ಶಹಾಪುರ ನಗರದಲ್ಲಿರುವ ಸಾರಿಪುತ್ರ ಬುದ್ಧ ವಿಹಾರದ ಆವರಣದಲ್ಲಿ 100 ಸಸಿ ನೆಡುವುದರ ಮೂಲಕ ಮತ್ತು   ರಸ್ತಾಪುರ ಸರ್ಕಾರಿ ಪ್ರೌಢ  ಶಾಲೆಯಲ್ಲಿ  ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್  ಮತ್ತು ಕ್ರೀಡಾ ಸಾಮಗ್ರಿಗಳನ್ನು ಹಾಗೂ ವಸತಿ ನಿಲಯಕ್ಕೆ ತಟ್ಟೆ ಲೋಟ  ನೀಡುವುದರ ಜೊತೆಗೆ ಶಹಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸುವ ಮೂಲಕ ಆಚರಿಸಿದರು.

ಡಾ.ಜಿ ಪರಮೇಶ್ವರ ಯುವ ಸೈನ್ಯದ ಜಿಲ್ಲಾಧ್ಯಕ್ಷರಾದ ಮೌನೇಶ್  ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಪುತ್ರ ಬುದ್ಧ ವಿಹಾರದ ಆವರಣದಲ್ಲಿ 100 ಸಸಿ ನೆಟ್ಟು ತಾಲೂಕಿನ  ರಸ್ತಾಪುರ ಸರ್ಕಾರಿ ಪ್ರೌಢ  ಶಾಲೆಯಲ್ಲಿ   ಎಸ್. ಎಸ್. ಎಲ್. ಸಿ.ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್  ಮತ್ತು ಕ್ರೀಡಾ ಸಾಮಗ್ರಿಗಳ  ಜೊತೆಗೆ  ವಸತಿ ನಿಲಯಕ್ಕೆ ತಟ್ಟೆ ಲೋಟ  ನೀಡುವುದರ ಜೊತೆಗೆಶಹಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಮತ್ತು ಬ್ರೆಡ್‌ ವಿತರಿಸಿ ಈ ವೇಳೆ ಮಾತನಾಡಿದ ಅವರು ಕೊರಟಗೆರೆ ಕ್ಷೇತ್ರದ ಶಾಸಕರೂ ಆಗಿರುವ ಡಾ.ಜಿ.ಪರಮೇಶ್ವರ್ ಓರ್ವ ಸಜ್ಜನ ರಾಜಕಾರಣಿ, ತಮ್ಮ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ಅವರು ಬದುಕು ಕಟ್ಟಿಕೊಳ್ಳಲ ನೆರವಾಗಿದ್ದಾರೆ. ಐದು ಭಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಅಂತಹವರು ಇನ್ನೂ ಹತ್ತಾರು ವರ್ಷಗಳ ಕಾಲ ಬದುಕಿ, ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಮತ್ತಷ್ಟು ಬಡವರಿಗೆ ನೆರವು ನೀಡುವಂತಾಗಲಿ  ಎಂದು ಶುಭ ಹಾರೈಸುವ ದಾಗಿ ತಿಳಿಸಿದರು.ತಾಲೂಕು ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಅರ್ಬೊಳ ಮಾತನಾಡಿ ಡಾ.ಜಿ.ಪರಮೇಶ್ವರ್ ಅವರು ಸಮಾನತೆಯ ಸಮಾಜ ನಿರ್ಮಾಣದ ಕನಸುಗಾರ, ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಎಲ್ಲ ರೀತಿಯ ವಾತಾವರಣ ನಿರ್ಮಾಣವಾಗಿದೆ. ಜನಸಾಮಾನ್ಯರಿಂದ ಹೊರ ಬರುತ್ತಿರುವ ಪ್ರತಿಕ್ರಿಯೆ ಮತ್ತು ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದಲ್ಲಿ ಸೇರಿದ್ದ ಜನಸ್ತೋಮವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ನಂತರ  ಕವಿ, ಯುವ ಬರಹಗಾರ ಪ್ರಾಧ್ಯಾಪಕರಾದ ಭೀಮಣ್ಣ ಮಂಡಗಳ್ಳಿ ಮಾತನಾಡಿ ಸಮಾಜದಲ್ಲಿ ಎಲ್ಲಾ ಇದ್ದು ಇರದಂತೆ ಬದುಕುವ ಗುಂಪು ಒಂದು ಕಡೆಯಾದರೆ ಇದ್ದದ್ದರಲ್ಲಿಯೇ ಹಂಚಿ ತಿನ್ನುವ ಗುಣ ಹೊಂದಿರುವ ಗುಂಪು ಅತೀ ವಿರಳ, ತನ್ನ ಸಾಮರ್ಥ್ಯಕ್ಕನುಗುಣವಾಗಿ ಮಲ್ಲಿಕಾರ್ಜುನ ಆರಬೋಳ ಅವರ ಸಾಮಾಜಿಕ ಕಳಕಳಿ ನಿಜಕ್ಕೂ ಅಭಿನಂದನಾರ್ಹ, ಪ್ರತಿ ಕಾರ್ಯಕ್ರಮಗಳಲ್ಲಿ ಈ ರೀತಿಯ ಮಾನವೀಯ ಕಾರ್ಯಗಳನ್ನು ಮಾಡುತ್ತಿರುವುದು ಸೈನ್ಯದ ಹಾಗೂ ಅವರ ಸಂಸ್ಥೆಯ ಹೆಗ್ಗಳಿಕೆ ಎಂದು ನುಡಿದರು. 

ಈ ಸಂಧರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ರಾಜು ಅಣಬಿ, ವಿರೇಶ್ ಅಂಗಡಿ,  ರಸ್ತಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಂಕಣ್ಣ ನಾಟೇಕರ್, ಭಾಗ್ಯವಂತಿ ಮ್ಯಾನ್ ಪವರ್ ಏಜನ್ಸಿ ಮುಖ್ಯಸ್ಥರಾದ ಮಲ್ಲಿಕಾರ್ಜುನ ಆಲೂರು, ಶಾಲಾ ಶಿಕ್ಷಕರಾದ ಜಟ್ಟೆಪ್ಪ ಬಾವಿಮನಿ, ಏಕನಾಥ್, ದೈಹಿಕ ಶಿಕ್ಷಕರಾದ ಚಂದ್ರಶೇಖರ ವೈದ್ಯ, ವಸತಿ ನಿಲಯ ಪಾಲಕಿ ಶಾರದ, 

ಭಾಗ್ಯ ಸಂಗಡಿಗರಿಂದ ಪ್ರಾರ್ಥನಗೀತೆ ಹಾಡಿದರು ದೇವಿಂದ್ರ ಹುಲ್ಕಲ್ ನಿರೂಪಿಸಿದರು,  ಶೇಖರ್ ಬಡಿಗೇರ್ ವಂದಿಸಿದರು.

Friday, June 10, 2022

ಅಡ್ಡಮತದಾನಕ್ಕೆ ಕಿಡಿಕಾರಿದ ಕುಮಾರಸ್ವಾಮಿ

 


ಬೆಂಗಳೂರು: ಇಂದು ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಹಲವೊಂದು ಪ್ರಸಂಗಗಳು ನಡೆಯುತ್ತಿದೆ. ಕೋಲಾರದ ಜೆಡಿಎಸ್ ನಾಯಕ ಶ್ರೀನಿವಾಸ ಗೌಡ ಅಡ್ಡ ಮತದಾನ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಕೋಲಾರ ಶಾಸಕರ ನಡೆಗೆ ಜೆಡಿಎಸ್ ನಾಯಕರು ಕಿಡಿಕಾರಿದ್ದು, “ಆ ಮನುಷ್ಯನಿಗೆ ಮಾನಮರ್ಯಾದೆ ಇದೆಯೇ” ಎಂದು ಕುಮಾರಸ್ವಾಮಿ ಗರಂ ಆಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ಮಾನಮರ್ಯಾದೆ ಇದ್ದರೆ ರಾಜಕಾರಣ ಮಾಡಲಿ. ಇಂತಹ ಕೆಲಸ ಮಾಡಬಾರದು. ಇದು ಜೆಡಿಎಸ್ ಕಾರ್ಯಕರ್ತರಿಗೆ ಮಾಡಿದ ಅವಮಾನ ಎಂದರು. ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿ ಮಾಡುವುದನ್ನು ಇವರು ‌ಮಾಡುತ್ತಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಲು ಹೋಗಿದ್ದಾರೆ. ಈ ಅಡ್ಡಮತದಾನದಿಂದ ಕಾಂಗ್ರೆಸ್ ನವರಿಗೆ ಗೆಲ್ಲಲು ಆಗುವುದಿಲ್ಲ. ನಾಡಿನ ಜನತೆ ನೋಡುತ್ತಿದ್ದಾರೆ. ಇವರು ಯಾವ ಮುಖ ಇಟ್ಟು ಬಿಜೆಪಿ ಬಗ್ಗೆ ಮಾತನಾಡುತ್ತಾರೆ?  ಬಿಜೆಪಿ ಗೆಲ್ಲಿಸಲು ಯಾಕೆ ಹೀಗೆ ಮಾಡುತ್ತೀರಿ? ನಿಮ್ಮನ್ನು ಮತ್ತು ಬಿಜೆಪಿಯನ್ನು ಎದುರಿಸುವ ಶಕ್ತಿ ನಮಗಿದೆ ಎಂದು ಗುಡುಗಿದರು.

ವಡಗೇರಾ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ವಡಗೇರಾ: ಹಿರಿಯ ನಾಗರಿಕರು ಮತ್ತು ಇನ್ನಿತರ ಫಲಾನುಭವಿಗಳು ಪಿಂಚಣಿ ನಿಂತಿರುವ ಮತ್ತು ಪಿಂಚಣಿಗಾಗಿ ಹೊಸ ಅರ್ಜಿ ಸಲ್ಲಿಸಲು ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಿಗೆ ಅಲೆದಾಡ...